ಬೆಳ್ತಂಗಡಿ : ಉಜಿರೆ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದ್ದು, ಆರು ಆರೋಪಿಗಳನ್ನು ಡಿ.20ರ ರವಿವಾರದಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಳಿಕ ಅವರನ್ನು ಹತ್ತು ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಯಿತು. ಅನುಭವ್ನನ್ನು ಕೋಲಾರದಿಂದ ಕರೆದುಕೊಂಡು ಹೆತ್ತವರು ಶನಿವಾರ ಉಜಿರೆಯ ಮನೆಗೆ ತಲುಪಿದ್ದರು.
ಬಾಲಕನ ಅಪಹರಣದ ಪ್ರಮುಖ ಆರೋಪಿಯ ಪತ್ತೆಗೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಬಾಲಕನ ತಂದೆ ಬಿಜೋಯ್ ಅವರ ಪರಿಚಿತನಿಂದಲೇ ಈ ಕೃತ್ಯ ನಡೆದಿರುವುದಾಗಿ ಈಗಾಗಲೇ ಪೊಲೀಸರು ತಿಳಿಸಿದ್ದಾರೆ. ಪ್ರಮುಖ ಆರೋಪಿಯ ಬಂಧನದ ಬಳಿಕ ಪ್ರಕರಣದ ಆಯಾಮ ಯಾವುದೇ ಸ್ವರೂಪವನ್ನು ಪಡೆಯುವ ಸಾಧ್ಯತೆ ಇದೆ.
ಬಿಜೋಯ್ ಅವರು ಅಪಹರಣದ ರೂವಾರಿಗೆ 1.30 ಕೋಟಿ. ರೂ ನೀಡಲು ಬಾಕಿ ಇತ್ತೇ ಎನ್ನುವ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅಪಹರಣಕಾರ ಹಾಸನ ಜಿಲ್ಲೆಯವನಾಗಿದ್ದು, ಈತನಿಗೆ ಬಿಜೋಯ್ ಅವರ ಮನೆಯ ಬಗ್ಗೆ ಸ್ಪಷ್ಟವಾಗಿ ತಿಳಿದಿತ್ತು ಎಂದು ತನಿಖೆಯ ಸಂದರ್ಭ ತಿಳಿದುಬಂದಿದೆ. ಅಪಹರಣಕಾರರು ಬಿಟ್ ಕಾಯಿನ್ಗಾಗಿ ಬೇಡಿಕೆ ಮುಂದಿಟ್ಟಿದ್ದು, ಒಟ್ಟು ಪ್ರಕರಣದ ಹಿಂದೆ ಬಿಟ್ ಕಾಯಿನ್ ವ್ಯವಹಾರ ಇದೆ ಎನ್ನುವ ಅನುಮಾನ ಮೂಡಿದೆ. ಪೊಲೀಸರು ಬಿಜೋಯ್ ಅವರ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದು, ಅವರ ವ್ಯವಹಾರದ ಮೇಲೆ ನಿಗಾ ವಹಿಸಿದ್ದಾರೆ.
ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ, ಉಪನಿರೀಕ್ಷಕ ನಂದಕುಮಾರ್ ಅವರ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ.ಪ್ರಕರಣದ ಚಿತ್ರಣವು ಒಂದೆರಡು ದಿನಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಅಲ್ಲದೇ, ಸ್ಥಳ ಮಹಜರಿಗಾಗಿ ಆರೋಪಿಗಳನ್ನು ಪುನಃ ಕೋಲಾರಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ.
ನನ್ನನ್ನು ಅಪಹರಿಸಿದ ವೇಳೆ, ನಾನು ನಿನ್ನ ತಂದೆಯ ಸ್ನೇಹಿತರು ಎಂದು ಹೇಳಿದ್ದರು. ನಿನ್ನ ತಂದೆಗೆ ಸರ್ಪ್ರೈಸ್ ನೀಡಲು ಕರೆದೊಯ್ಯುತ್ತಿದ್ದೇವೆ ಎಂದು ಹೇಳಿದ್ದರು ಎಂದು ಬಾಲಕ ಹೇಳಿದ್ದಾನೆ.
ಬಾಲಕನ ತಾಯಿ ಸರಿತಾ ಅವರು ಕೂಡಾ ಪ್ರತಿಕ್ರಿಯಿಸಿದ್ದು, ಮಗನನ್ನು ಕ್ಷೇಮವಾಗಿ ಕರೆತಂದ ಪೊಲೀಸರಿಗೆ ಹಾಗೂ ತನಿಖೆಗಾಗಿ ಮಾಹಿತಿ ನೀಡಿದ ಊರವರಿಗೆ ಕೃತಜ್ಞತೆಗಳು. ಮಕ್ಕಳ ಬಗ್ಗೆ ನಿಗಾ ಇಡಬೇಕು. ಅಲ್ಲದೇ, ಸ್ಯಯಂ ರಕ್ಷಣೆಯ ಪಾಠವನ್ನು ಕೂಡಾ ಕಲಿಯಬೇಕಿದೆ ಎಂದಿದ್ದಾರೆ.