ಮಂಗಳೂರು : ರಾಜ್ಯಾದ್ಯಂತ ಮೊದಲನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಯ ಮತದಾನ ಇಂದು ಬೆಳಗ್ಗೆ ಆರಂಭಗೊಂಡಿದ್ದು, ಹಲವೆಡೆ ಚಳಿ ನಡುವೆಯೂ ಬಿರುಸಿನಲ್ಲಿ ಮತ ಚಲಾವಣೆಯಾಗುತ್ತಿದೆ.
ಹಕ್ಕು ಚಲಾವಣೆಗಾಗಿ ಮತದಾರರು ಮತಗಟ್ಟೆಯತ್ತ ಉತ್ಸಾಹದಿಂದ ಬರಲಾರಂಭಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮೂರು ತಾಲೂಕುಗಳ106 ಗ್ರಾಮ ಪಂಚಾಯತ್ ಗಳಿಗೆ ಮತದಾನ ನಡೆಯುತ್ತಿದೆ. ಮಂಗಳೂರು, ಬಂಟ್ವಾಳ ಹಾಗೂ ಮೂಡಬಿದಿರೆ ತಾಲೂಕು ವ್ಯಾಪ್ತಿಯಲ್ಲಿ ಮತದಾನ ಬೆಳಗ್ಗೆ 7ರಿಂದ ಮತದಾನ ಆರಂಭಗೊಂಡಿದೆ.
ಮಾಜಿ ಸಚಿವ ಬಿ.ರಮಾನಾಥ ರೈಯವರು ಇಂದು ಬೆಳಗ್ಗೆ ಬಂಟ್ವಾಳದ ಕಳ್ಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತಡಂಬಿಲ ಶಾಲೆಯ ಮತ ಗಟ್ಟೆಯಲ್ಲಿ ಮತ ಚಲಾಯಿಸಿದರು. ಇದಕ್ಕೂ ಮೊದಲು ಅವರು ಬಂಟ್ವಾಳ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದಲ್ಲಿ ಬೆಳಗ್ಗೆ ಭಾರೀ ಚಳಿಯಿದ್ದರೂ ಮತದಾರರು ಮತಗಟ್ಟೆ ಎದುರು ಸಾಲುಗಟ್ಟಿ ನಿಂತಿರುವು ದೃಶ್ಯಗಳು ಕಂಡುಬಂದವು. ಅದೇರೀತಿ ಚಾಮರಾಜ ನಗರ, ಚಿತ್ರದುರ್ಗದ ಹಲವು ಗ್ರಾಮಗಳಲ್ಲಿ ಮತದಾನ ಬಿರುಸಿನಿಂದ ಕೂಡಿದೆ.
ಮೊದಲ ಹಂತದಲ್ಲಿ ರಾಜ್ಯದ 113 ತಾಲೂಕುಗಳ 3,019 ಗ್ರಾಮ ಪಂಚಾಯತ್ಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, 43,238 ಸ್ಥಾನಗಳಿಗೆ 1,17,383 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
3,019 ಪಂಚಾಯತ್ಗಳಲ್ಲಿ ಒಟ್ಟು 48,048 ಸ್ಥಾನಗಳಿದ್ದು, ಅವುಗಳಲ್ಲಿ ಈಗಾಗಲೇ 4,377 ಮಂದಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಮತದಾರರು ಚುನಾವಣೆ ಸಂದರ್ಭ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ. ಕೊರೋನ ಸೋಂಕಿತರು ಮತದಾನ ಮಾಡಲು ಕೊನೆಯ 1 ಗಂಟೆ ಅವಕಾಶ ನೀಡಲಾಗಿದೆ. 5,847 ಚುನಾವಣಾ ಅಧಿಕಾರಿ ಹಾಗೂ 6,085 ಸಹಾಯಕ ಚುನಾವಣಾ ಅಧಿಕಾರಿಗಳು ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
2ನೇ ಹಂತದ ಚುನಾವಣೆಯು ಡಿ.27ರಂದು ನಡೆಯಲಿದೆ. ಎರಡು ಹಂತಗಳ ಚುನಾವಣೆಯ ಮತ ಎಣಿಕೆ ಡಿ.30ರಂದು ನಡೆಯಲಿದೆ.