ಬಂಟ್ವಾಳ: ಕೊರೊನಾ ಬಂದ ಬಳಿಕ ಜಗತ್ತು ಭಾರತೀಯ ಚಿಂತನೆಗಳತ್ತ ನೋಡುವ ಕಾಲ ಬಂದಿದೆ. ಮನುಷ್ಯ ಪ್ರಕೃತಿಯೊಂದಿಗಿನ ಸಂಬಂಧಗಳ ಅನಾವರಣವನ್ನು ಪ್ರೊ. ರಾಜಮಣಿ ರಾಮಕುಂಜ ಅವರು ಮಾಡಿದ್ದು, ಪ್ರಕೃತಿ, ಪರಿಸರಕ್ಕೆ ವಿರುದ್ಧವಾಗಿ ನಾವು ನಡೆದರೆ ಹೇಗೆ ತಿರುಗುಬಾಣವಾಗುತ್ತದೆ ಎಂಬುದನ್ನು ಅವರು ಮಾರ್ಮಿಕವಾಗಿ ವಿವರಿಸಿದ್ದಾರೆ ಎಂದು ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅವರು ಪರಿಸರವಾದಿ ಪ್ರೊ. ರಾಜಮಣಿ ರಾಮಕುಂಜ ಬರೆದ ಮೊಡಂಕಾಪು ಸರಿದಂತರ ಪ್ರಕಾಶನ ಪ್ರಕಟಿತ ‘ತಿರುಗುಬಾಣ’ ಎಂಬ ಕೃತಿಯನ್ನು ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಲಾಕ್ಡೌನ್ ಅವಧಿಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ತಮ್ಮ ಬಾಲ್ಯದ ನೆನಪುಗಳನ್ನು ಕೊರೊನಾ ಸಂದರ್ಭಕ್ಕೆ ಅನ್ವಯಿಸಿ ಭೂತ, ವರ್ತಮಾನ ಮತ್ತು ಭವಿಷ್ಯತ್ಕಾಲ ದೃಷ್ಟಿಯಿಂದ ವಿಶ್ಲೇಷಿಸುವ ರಾಜಮಣಿಯವರು, ಪರಿಸರದ ಮೇಲಿನ ಮಾನವನ ದಬ್ಬಾಳಿಕೆಯನ್ನು ವಿವರಿಸುತ್ತಾರೆ. ಸ್ವಾವಲಂಬಿ ಬದುಕು ಮಾತ್ರ ಭಾರತವನ್ನು ದೃಢಗೊಳಿಸಬಲ್ಲದು ಎನ್ನುವುದನ್ನು ತಿಳಿಸಿ, ಭಾರತದ ಸತ್ವಯುತ ಮಣ್ಣಿನ ಗುಣವನ್ನು ಸೆರೆಹಿಡಿದಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಿರೀಶ ಭಟ್ ಅಜಕ್ಕಳ ಮಾತನಾಡಿ, ಮನುಷ್ಯ ತಾನೇ ಶ್ರೇಷ್ಠ, ಪ್ರಾಣಿ ಪಕ್ಷಿಗಳ ಸಹಿತ ಉಳಿದವೆಲ್ಲ ತನ್ನ ಅಡಿಯಾಳುಗಳು ಎಂಬ ಚಿಂತನೆಯನ್ನು ಕಳಚಿಕೊಳ್ಳುವ ಕಾಲ ಇಂದು ಬಂದಿದ್ದು, ಪ್ರೊ.ರಾಜಮಣಿ ಅವರ ಬರೆಹಗಳಲ್ಲಿ ಇವು ಕಾಣಿಸುತ್ತದೆ ಎಂದರು.
ಪುಸ್ತಕದ ಕುರಿತು ಮಾತನಾಡಿದ ಕೃತಿಕಾರ ಪ್ರೊ.ರಾಜಮಣಿ ರಾಮಕುಂಜ, ಲಾಕ್ಡೌನ್ ಸಂದರ್ಭ ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಈ ಲೇಖನಗಳು ವರ್ತಮಾನಕ್ಕೆ ಸಂಬಂಧಿಸಿದ ವಿಚಾರಗಳನ್ನು ಒಳಗೊಂಡಿವೆ ಎಂದರು. ಮುಖ್ಯ ಅತಿಥಿ ಮಂಗ್ಲಿಮಾರ್ ಅಣ್ಣಪ್ಪ ಸ್ವಾಮಿ ಜುಮಾದಿ ಬಂಟ ದೈವಸ್ಥಾನದ ಆಡಳಿತ ಮೊಕ್ತೇಸರ ರವಿಶಂಕರ ಶೆಟ್ಟಿ ಬಡಾಜೆ ‘ತಿರುಗುಬಾಣ’ ಕೃತಿಗೆ ಶುಭ ಹಾರೈಸಿದರು.