ಬೆಂಗಳೂರು: ಲವ್ ಜಿಹಾದ್ ವಿರುದ್ಧ ಕಾನೂನು ತರುವ ಸರ್ಕಾರದ ಪ್ರಯತ್ನದ ವಿರುದ್ಧ ಮಾಜಿ ಮುಖ್ಯಮಂತ್ರಿಗಳ ಹೇಳಿಕೆ ಸಂವಿಧಾನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಎಂದು ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡೆಯನ್ನು ಖಂಡಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಪ್ರಾತಿನಿಧ್ಯ ಕಾಯ್ದೆಯಂತೆ ಬಹುಜನರ ಅಭಿಪ್ರಾಯದ ಮೇರೆಗೆ ಚುನಾಯಿತ ಪ್ರತಿನಿಧಿಗಳ ಮೂಲಕ ಕಾನೂನುಗಳನ್ನು ರಚಿಸುವುದು ಶಾಸಕಾಂಗದ ಮೂಲ ಹಕ್ಕಾಗಿದೆ. ಪ್ರತಿಭಟನೆ ಮಾಜಿ ಮುಖ್ಯಮಂತ್ರಿಗಳ ಸಾಂವಿಧಾನಿಕ ಹಕ್ಕಾದರೂ, ಸಾರ್ವಜನಿಕ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವ ಕಾನೂನುಗಳನ್ನೇ ಮಾಡಬಾರದು ಎನ್ನುವ ಅಭಿಪ್ರಾಯ ಅವರ ಅಪ್ರಬುದ್ಧತೆಗೆ ಸಾಕ್ಷಿ ಎಂದು ಕಾರ್ಣಿಕ್ ಟೀಕಿಸಿದ್ದಾರೆ.
ಹಿಂದೂ ಮುಸ್ಲಿಂ ಕ್ರಾಸಾಗಿ ಹುಟ್ಟಿರುವವರು ನಮ್ಮ ದೇಶದಲ್ಲಿ ಬಹಳ ಜನ ಇದ್ದಾರೆ” ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿಗಳು ಮೊದಲನೇ ಬಾರಿಗೆ ವಾಸ್ತವ ಸಂಗತಿಯನ್ನು ಜನರ ಮುಂದೆ ಇಟ್ಟಿದ್ದಾರೆ ಮತ್ತು ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಕ್ರಾಸ್ ಜನಾಂಗ ಎನ್ನುವ ಅವರ ಮಾತಿನಲ್ಲಿ ಬಹುಸಂಖ್ಯಾತ ಸಮುದಾಯದ ಮೇಲೆ ಮೊಘಲರ ಆಳ್ವಿಕೆಯ ಸಮಯದಲ್ಲಿ ನಡೆದ ದೌರ್ಜನ್ಯ, ಅತ್ಯಾಚಾರ ಮತ್ತು ಬಲಾತ್ಕಾರದ ಮತಾಂತರದ ಸತ್ಯ ಅಡಗಿದೆ ಎನ್ನುವುದು ವಾಸ್ತವ. ಇಂಥ ದೌರ್ಜನ್ಯ, ಅತ್ಯಾಚಾರ ಮತ್ತು ಬಲಾತ್ಕಾರ ಪ್ರವೃತ್ತಿ ಇಂದಿಗೂ ಮುಂದುವರಿದು ಬಹುಸಂಖ್ಯಾತ ಸಮುದಾಯದ ಹೆಣ್ಣು ಮಕ್ಕಳನ್ನು ಆಮಿಷಗಳ ಮೂಲಕ ಮದುವೆಯ ನೆಪದಲ್ಲಿ ಮತಾಂತರಿಸಿ ಸಮುದಾಯದ ಸಂಖ್ಯಾತ್ಮಕ ಬೆಳವಣಿಗೆಯ ಷಡ್ಯಂತ್ರವೇ ಲವ್ ಜಿಹಾದ್ ಆಗಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಮುಸ್ಲಿಂ ಮಹಿಳೆಗೆ ಜೀವನಾಂಶ ಕೊಡುವ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಸಂವಿಧಾನವನ್ನೇ ತಿದ್ದುಪಡಿ ಮಾಡಿರುವ ಕಾಂಗ್ರೆಸ್ ಇಂದು ಮೃದು ಹಿಂದುತ್ವದ ಜಪ ಮಾಡುತ್ತಿರುವುದು ಅವರ ಹತಾಶ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಕಾನೂನು ಪದವೀಧರರಾದ ಮಾಜಿ ಮುಖ್ಯಮಂತ್ರಿಗಳು, ಲವ್ ಜಿಹಾದ್ ಹೆಸರಿನಲ್ಲಿ ನಡೆಯುತ್ತಿರುವಂತಹ ಬಹುಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳ ಮಾನವೀಯ ಹಕ್ಕುಗಳ ಉಲ್ಲಂಘನೆಯ ಕುರಿತು ಆಲೋಚಿಸದೇ ಇರುವುದು ದೊಡ್ಡ ದುರಂತ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರೇ, ಅಧಿಕಾರಕ್ಕಾಗಿ ತಾವು ಏರಿದ ಏಣಿಯನ್ನೇ ಧಿಕ್ಕರಿಸಿದ ನೀವು ಬಹುಸಂಖ್ಯಾತ ಸಮುದಾಯವನ್ನು ಬೇಕಾಬಿಟ್ಟಿ ಎಂಬಂತೆ ಪರಿಗಣಿಸುತ್ತಿದ್ದೀರಿ ಎಂದು ಟೀಕಿಸಿದ್ದಾರೆ. ತಮ್ಮ ಇತ್ತೀಚಿನ ಮೃದು ಹಿಂದುತ್ವದ ಧೋರಣೆಯನ್ನು ಬಹುಸಂಖ್ಯಾತ ಸಮುದಾಯ ಯಾವತ್ತೂ ಸ್ವೀಕರಿಸುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.