ಮಂಗಳೂರು, ಫೆ.4: ನಗರ ಹೊರವಲಯದ ಕುಳಾಯಿ ಸಮೀಪ ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಬುಧವಾರ ರಾತ್ರಿ 12 ಗಂಟೆಗೆ ನಡೆದಿದೆ.
ಮೃತಮಹಿಳೆಯನ್ನು ಮೂಲತಃ ಕೃಷ್ಣಾಪುರ ಚೊಕ್ಕಬೆಟ್ಟುವಿನ ಸದ್ಯ ನಗರದ ಬೋಂದೆಲ್ನಲ್ಲಿ ವಾಸಿಸುತ್ತಿದ್ದ ಸುಹಾನಾ (26) ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಸುಹಾನಾರ ಸಹೋದರಿ ಫಾತಿಮಾ ಶೌರೀನ್, ಸಹೋದರರಾದ ರಾಹಿಲ್ ಶಮೀಮ್ ಮತ್ತು ರಾಝಿಕ್ ಶಹಾನ್ ಎಂಬವರಿದ್ದು, ಅವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಮದುವೆ ಕಾರ್ಯಕ್ರಮಕ್ಕೆ ತೆರಳಲು ಸಿದ್ಧತೆಯಲ್ಲಿದ್ದ ಈ ಸಹೋದರ, ಸಹೋದರಿಯರು ನಗರಕ್ಕೆ ಆಗಮಿಸಿ ಆಹಾರ ಪಾರ್ಸೆಲ್ ಮಾಡಿಸಿಕೊಂಡು ಕೃಷ್ಣಾಪುರ ಚೊಕ್ಕಬೆಟ್ಟುವಿಗೆ ತೆರಳುತ್ತಿದ್ದಾಗ ಕುಳಾಯಿ ಬಳಿ ಅಪಘಾತ ಸಂಭವಿಸಿತೆನ್ನಲಾಗಿದೆ.
ಕಾರು ಚಲಾಯಿಸುತ್ತಿದ್ದ ರಾಹಿಲ್ ಶಮೀಮ್ಗೆ ವಿರುದ್ಧ ದಿಕ್ಕಿನಲ್ಲಿ ಮತ್ತೊಂದು ಕಾರು ಬಂದಂತಾಗಿ ಅದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನ ನಡೆಸಿದಾಗ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.
ಕಾರಲ್ಲಿದ್ದ ನಾಲ್ಕು ಮಂದಿಗೂ ಗಾಯವಾಗಿದ್ದು, ಆ ಪೈಕಿ ಸುಹಾನಾ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ1:33ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ಸುಹಾನಾ ಅವರು ಪತಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಈ ಬಗ್ಗೆ ಮುಹಮ್ಮದ್ ರಿಯಾಝ್ ನೀಡಿದ ದೂರಿನಂತೆ ಸಂಚಾರ ಉತ್ತರ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.