ಚಾಮರಾಜನಗರ: ಜಾತಿ ಮನೋಭಾವನೆಯಲ್ಲಿ ಖಾತೆ ಹಂಚಿಕೆ ಆಗಿಲ್ಲ. ಯಾರೋ ಈ ಬಗ್ಗೆ ವದಂತಿ ಸೃಷ್ಟಿಸಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಖಾತೆ ಹಂಚಿಕೆ ವೇಳೆ ಒಕ್ಕಲಿಗರನ್ನು ಕಡೆಗಣಿಸಿಲ್ಲ. ಎಸ್.ಟಿ.ಸೋಮಶೇಖರ್ ಅವರಿಗೆ ಅತ್ಯಂತ ದೊಡ್ಡದಾದ ಸಹಕಾರ, ಎಪಿಎಂಸಿ ಖಾತೆ ನೀಡಲಾಗಿದೆ. ಸುಧಾಕರ್ ಅವರಿಗೆ ಆರೋಗ್ಯ ಖಾತೆ ಇದೆ. ಅಶೋಕ ಅವರು ಕಂದಾಯ ಸಚಿವರಾಗಿದ್ದಾರೆ. ಸಿ.ಪಿ.ಯೋಗೇಶ್ವರ್ ಗೆ ಸಣ್ಣ ನೀರಾವರಿ ಖಾತೆ ಇದೆ. ನಾರಾಯಣ ಗೌಡ ಅವರಿಗೆ ಕ್ರೀಡಾ ಮತ್ತು ಯೋಜನಾ ಖಾತೆ ಸಿಕ್ಕಿದೆ. ಗೋಪಾಲಯ್ಯಗೆ ಅಬಕಾರಿ ಖಾತೆ ನೀಡಲಾಗಿದೆ’ ಎಂದರು.
ಎಲ್ಲರೂ ಲೀಡರ್ರೇ: ‘ಮುಂಬೈ ಟೀಂನ ಲೀಡರ್ ಆಗಿದ್ದ ನಾನು ಈಗ ಒಬ್ಬಂಟಿಯಾಗಿದ್ದೇನೆ’ ಎಂದು ಅಡಗೂರು ಎಚ್.ವಿಶ್ವನಾಥ್ ಅವರು ನೀಡಿರುವ ಹೇಳಿಕೆ ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ, ‘ಅವರು ಒಬ್ಬಂಟಿಯಲ್ಲ. ನಾವೆಲ್ಲ ಇದ್ದೇವೆ.
ವಿಶ್ವನಾಥ್ ಅವರಿಗೆ ಅವರೇ ಲೀಡರ್. ಇಲ್ಲಿ ಯಾರಿಗೆ ಯಾರೂ ಲೀಡರ್ ಆಗುವುದಕ್ಕೆ ಆಗುವುದಿಲ್ಲ. ಅವರನ್ನು ಸಚಿವರನ್ನಾಗಿ ಮಾಡುವುದಕ್ಕೆ ಕಾನೂನಿನ ತೊಡಕು ಇದೆ. ಕೋರ್ಟ್ ಆದೇಶ ಇರುವುದರಿಂದ ಅವರನ್ನು ಮಂತ್ರಿ ಮಾಡುವುದಕ್ಕೆ ಆಗಿಲ್ಲ’ ಎಂದು ಹೇಳಿದರು.
.