ಮಂಗಳೂರು: ರಾಜ್ಯದಲ್ಲಿ ಪಕ್ಷದ ಅತಿ ಉನ್ನತ ನಿರ್ಧಾರ ಕೈಗೊಳ್ಳುವ ಸಂಸ್ಥೆ ಬಿಜೆಪಿ ಕೋರ್ ಸಮಿತಿಯ ಪುನರ್ರಚನೆ ಮಾಡಿ ಅಲ್ಲಿ ಒಂದು ಸ್ಥಾನಕ್ಕಾಗಿ ಬಿಜೆಪಿಯ ಹಲವು ಹಿರಿಯ ನಾಯಕರು ಕಾಯುತ್ತಿದ್ದಾರೆ.ಸಚಿವ ಸ್ಥಾನ ಕೈತಪ್ಪಿದ ಬಳಿಕ ಅತೃಪ್ತ ಬಿಜೆಪಿ ನಾಯಕರು ಕೋರ್ ಕಮಿಟಿಯಲ್ಲಾದರೂ ಒಂದು ಸ್ಥಾನ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾಾರೆ.
ಬಿಜೆಪಿ ಕೋರ್ ಕಮಿಟಿಯನ್ನು ಕಳೆದ ಬಾರಿ ಪುನರ್ರಚನೆ ಮಾಡಿದ್ದು 2016ರಲ್ಲಿ. ಪಕ್ಷದ ಸಂಘಟನೆ,ಮುಂಬರುವ ಜಿಲ್ಲಾ ಪಂಚಾಯತ್ ಮತ್ತು 2023ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗ ಬಿಜೆಪಿ ಕೋರ್ ಕಮಿಟಿಯ ಮರು ರಚನೆ ಅಗತ್ಯ ಎಂದು ಹಲವರು ಬಯಸಿದ್ದಾರೆ.
ಕೆಲವು ಕಳಂಕಿತ ಸದಸ್ಯರನ್ನು ಕೈಬಿಟ್ಟು ಕೋರ್ ಕಮಿಟಿಯನ್ನು ಸ್ವಚ್ಛಗೊಳಿಸುವ ಅಗತ್ಯದ ಬಗ್ಗೆ ಕೇಂದ್ರ ನಾಯಕತ್ವ ಬಯಸಿದ್ದು, ಮಾಜಿ ಕೇಂದ್ರ ಸಚಿವ ಹೆಚ್ ಎನ್ ಅನಂತ್ ಕುಮಾರ್ ಅವರ ನಿಧನ ಬಳಿಕ ಅತ್ಯಗತ್ಯವಾಗಿದೆ ಎಂದು ಭಾವಿಸಿದಂತಿದೆ.
ಆದರೆ ಸದ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ತೊಂದರೆಯಾಗದಂತೆ ಜಾಗ್ರತೆಯಿಂದ ಹೆಜ್ಜೆಯಿಡಬೇಕೆಂದು ಪಕ್ಷದಲ್ಲಿ ಹಲವರು ಭಾವಿಸಿದ್ದಾರೆ. ಎರಡು ವರ್ಷಗಳ ನಂತರ ಸುಗಮವಾಗಿ ಅಧಿಕಾರ ಹಂಚಿಕೆ ಮಾಡಬೇಕೆಂದು ನೋಡುತ್ತಿದ್ದಾರೆ. ಕೋರ್ ಕಮಿಟಿಯ ಮರುರಚನೆ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಬಳಿ ಕೆಲವು ನಾಯಕರು ಚರ್ಚೆ ನಡೆಸಿದ್ದು ಆದರೆ ಅವರ ಕಡೆಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.
ಸದ್ಯ ಬಿ ಎಸ್ ಯಡಿಯೂರಪ್ಪನವರ ಕೈ ಮೇಲಾಗಿದ್ದು, ಲಿಂಗಾಯತ ಮತಗಳನ್ನು ಸೆಳೆಯುವ ಸಾಮರ್ಥ್ಯವಿರುವ ಬಲಿಷ್ಠ ನಾಯಕ ಸದ್ಯ ಅವರೊಬ್ಬರೇ. ಹೀಗಾಗಿ ಅವರನ್ನು ಅಸಮಾಧಾನಗೊಳಿಸುವ ವಿಷಯಕ್ಕೆ ಹೈಕಮಾಂಡ್ ಸದ್ಯ ಕೈಹಾಕುವ ನಿರೀಕ್ಷೆಯಿಲ್ಲ. ಅವರ ಮಾತಿಗೆ ಮನ್ನಣೆ ಸಿಗುವ ಸಾಧ್ಯತೆಯಿದೆ. ಕಳೆದ ಬಾರಿ ಪಕ್ಷದ ಕೋರ್ ಕಮಿಟಿಯ ಪುನರ್ರಚನೆ ಸಂದರ್ಭದಲ್ಲಿ, ಹೈಕಮಾಂಡ್ ಯಡಿಯೂರಪ್ಪನವರ ಆಪ್ತರಾದ ಶೋಭಾ ಕರಂದ್ಲಾಜೆ, ಬಸವರಾಜ್ ಬೊಮ್ಮಾಯಿ, ರವಿ ಕುಮಾರ್ ಅವರನ್ನು ಕೈಬಿಟ್ಟು ರಾಜಕೀಯ ಸಂದೇಶ ಕಳುಹಿಸಿತ್ತು.
.