ಬೆಂಗಳೂರು: ದರ್ಶನ್ ಅಭಿಮಾನಿಗಳ ಗಲಾಟೆ-ಗದ್ದಲಗಳ ನಡುವೆಯೇ ಮಾಜಿ ಶಾಸಕರಾಗಿರುವ ನಟ ಜಗ್ಗೇಶ್ ಅವರನ್ನು ಬೆಂಗಳೂರು ವಕ್ತಾರರನ್ನಾಗಿ ನೇಮಿಸಿ ಬಿಜೆಪಿ ಆದೇಶ ಹೊರಡಿಸಿದೆ.
ಆಡಿಯೋ ಕ್ಲಿಪ್ ವಿಷಯವೊಂದಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ನಡುವಿನ ಗಲಾಟೆ ಕಳೆದ ಮೂರುನಾಲ್ಕು ದಿನಗಳಿಂದ ಸಾಕಷ್ಟು ಚರ್ಚೆಗೆ ಗುರಿಯಾಗಿದೆ. ಈ ನಡುವೆ ಟ್ವೀಟರ್ ಹಾಗೂ ಪತ್ರಿಕಾಗೋಷ್ಟಿ ನಡೆಸಿದ ಹಿರಿಯ ನಟ ಜಗ್ಗೇಶ್ ದರ್ಶನ್ ಅಭಿಮಾನಿಗಳು ತೋರಿದ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಈ ಗಲಾಟೆ-ಗದ್ದಲಗಳ ನಡುವೆಯೇ ಮಾಜಿ ಶಾಸಕರಾಗಿರುವ ನಟ ಜಗ್ಗೇಶ್ ಅವರನ್ನು ಬೆಂಗಳೂರು ವಕ್ತಾರರನ್ನಾಗಿ ನೇಮಿಸಿ ಬಿಜೆಪಿ ಆದೇಶ ಹೊರಡಿಸಿದೆ. ಇದರ ಜೊತೆ ತೇಜಸ್ವಿನಿ ಗೌಡ ಅವರನ್ನು ಕೂಡ ಬೆಂಗಳೂರು ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ನಳೀನ್ ಕುಮಾರ್ ಕಟೀಲ್ ಈ ಆದೇಶ ಹೊರಡಿಸಿದ್ದಾರೆ. ಬೆಳಗಾವಿ, ಮೈಸೂರು, ಯಾದಗಿರಿ, ಮಂಗಳೂರಿಗೆ ವಕ್ತಾರರನ್ನಾಗಿ 10 ಮಂದಿಯನ್ನು ನೇಮಿಸಿ ಆದೇಶ ಪ್ರಕಟಿಸಲಾಗಿದೆ.
2008ರಲ್ಲಿ ತುರುವೇಕರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದಿದ್ದ ಅವರು, ಬಳಿಕ ಭಾರತೀಯ ಜನತಾ ಪಕ್ಷ ಸೇರಿದ್ದರು. 2018ರಲ್ಲಿ ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿ ಮೂಲಕ ಸ್ಪರ್ಧಿಸಿ ಸೋತಿದ್ದರು. 2019ರಲ್ಲಿ ನಡೆದ ಉಪಚುನಾವಣೆಯಲ್ಲಿಯೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬಿಜೆಪಿ ತಾರಾ ಪ್ರಚಾರಕರಾಗಿರುವ ಅವರಿಗೆ ಈಗ ಪಕ್ಷ ಮತ್ತೊಂದು ಜವಾಬ್ದಾರಿ ನೀಡಿದೆ.
ಪಕ್ಷದ ಜೊತೆ ಸಿನಿಮಾರಂಗದಲ್ಲಿ ಸಕ್ರಿಯಾರಾಗಿರುವ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಕ್ರಿಯಾಶೀಲರಾಗಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ 40 ವಸಂತಗಳನ್ನು ಪೂರೈಸಿರುವ ಅವರು, ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ.
ಬಿಜೆಪಿ ಪ್ರಕಟಿಸಿರುವ ವಕ್ತಾರರ ಪಟ್ಟಿ ಇಂತಿದೆ….
ಕ್ಯಾ. ಗಣೇಶ್ ಕಾರ್ಣಿಕ್- ಮಂಗಳೂರು- ಮುಖ್ಯ ವಕ್ತಾರರು
ಜಗ್ಗೇಶ್- ಬೆಂಗಳೂರು- ವಕ್ತಾರರು
ರಾಜೂಗೌಡ (ನರಸಿಂಹನಾಯಕ್)- ಯಾದಗಿರಿ- ವಕ್ತಾರರು
ಚಲವಾದಿ ನಾರಾಯಣಸ್ವಾಮಿ- ಬೆಂಗಳೂರು- ವಕ್ತಾರರು
ತೇಜಸ್ವಿನಿ ಗೌಡ- ಬೆಂಗಳೂರು- ವಕ್ತಾರರು
ಗಿರಿಧರ ಉಪಾಧ್ಯಾಯ- ಬೆಂಗಳೂರು- ವಕ್ತಾರರು
ಎಂ.ಬಿ ಜಿರಲಿ- ಬೆಳಗಾವಿ- ವಕ್ತಾರರು
ಶ್ರೀ ಮಹೇಶ್- ಮೈಸೂರು- ವಕ್ತಾರರು
ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮೀಸಲಾತಿ ನೀಡಬೇಕು. ಈ ಮೂಲಕ ಬಡವರ ಅಭಿವೃದ್ಧಿ ನಡೆಯಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದ ಶಾಸಕ ರಾಜೂಗೌಡ ಅವರನ್ನು ಕೂಡ ಯಾದಗಿರಿ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆವರೆಗೂ ಅಂದರೆ 2023ರವರೆಗೆ ಇವರು ಈ ಜವಾಬ್ದಾರಿ ನಿರ್ವಹಿಸಲಿದ್ದು, ಪಕ್ಷದ ಪರ ಕೆಲಸ ನಿರ್ವಹಿಸಲಿದ್ದಾರೆ.