ಮಂಗಳೂರು: ಬಹುನಿರೀಕ್ಷಿತ ಬೃಹತ್ ಯೋಜನೆಯಾಗಿರುವ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರಕಾರದ ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆ ಹಸಿರು ನಿಶಾನೆ ತೋರಿಸಿದೆ. ಈ ಮೂಲಕ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಬಹುಕಾಲದ ಪ್ರಯತ್ನ ಮತ್ತು ಸಂವಹನ ಯಶಸ್ವಿಯಾಗಿದೆ ಎಂದು ಟ್ವೀಟ್ ಮಾಡಿ ಸಂತಸವನ್ನು ಹಂಚಿಕೊಂಡಿದ್ದಾರೆ.
ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ ಮುಂದಿನ ದಿನಗಳಲ್ಲಿ ಅನುಷ್ಟಾನಕ್ಕೆ ಬರಲಿದೆ. ಸನ್ಮಾನ್ಯ ನರೇಂದ್ರ ಮೋದಿಯವರಿಗೆ, ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತ್ ಕುಮಾರ್ ಹಾಗೂ ಕೇಂದ್ರ ಸಚಿವರಾದ ಡಿ.ವಿ ಸದಾನಂದ ಗೌಡ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನಳಿನ್ ಕುಮಾರ್ ಕೃತಜ್ಞತೆ ಅರ್ಪಿಸಿದ್ದಾರೆ.
ಕೇಂದ್ರದ ಮೇಕ್ ಇನ್ ಇಂಡಿಯಾ ಯೋಜನೆಯ ಅಂಗವಾಗಿರುವ ಪ್ಲಾಸ್ಟಿಕ್ ಪಾರ್ಕ್ ಗಂಜಿಮಠ ಪರಿಸರದಲ್ಲಿ ಅನುಷ್ಟಾನಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಸಹಿತ ಜಿಲ್ಲೆಯ ಬೆಳವಣಿಗೆಗೆ ಈ ಯೋಜನೆ ಸಹಾಯಕವಾಗಲಿದೆ. ಈ ಯೋಜನೆಯಿಂದ ಲೋಕಸಭಾ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರು ನೀಡಿದ ಭರವಸೆ ಈಡೇರಿದಂತಾಗಿದೆ ಹಾಗೂ ಸಂಸದರ ಸಾಧನೆಯ ಪರ್ವಕ್ಕೆ ಮತ್ತೊಂದು ಗರಿ ಬಂದಂತಾಗಿದೆ.