ಮುಂಬೈ: ‘ದೇವರಿಗೂ ಕೂಡ ನನ್ನನ್ನು ಹಿಡಿಯಲು ಸಾಧ್ಯವಿಲ್ಲ, ಇನ್ನು ಪೊಲೀಸರಂತೂ ಮರೆತೇ ಬಿಡಿ’. ಇದು ರೌಡಿಶೀಟರ್ ಒಬ್ಬ ಮುಂಬೈ ಪೊಲೀಸರಿಗೆ ಹಾಕಿದ ಓಪನ್ ಚಾಲೆಂಜ್. ಆದರೆ, ಇದೀಗ ಕಂಬಿ ಹಿಂದೆ ಬಿದ್ದಿರುವ ರೌಡಿಶೀಟರ್, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? ಇಲ್ಲಿದೆ ಇಂಟೆರೆಸ್ಟಿಂಗ್ ಸ್ಟೋರಿ…
ಪಪ್ಪು ಹರಿಶ್ಚಂದ್ರ ಅಲಿಯಾಸ್ ಖೊಪ್ಡಿ ಎಂಬಾತನ ವಿರುದ್ಧ ಪೊವೈ, ಸಾಕಿ ನಕ, ಎಂಐಡಿಸಿ ಮತ್ತು ಆರೇ ಸೇರಿದಂತೆ ಮುಂಬೈನ ವಿವಿಧ ಠಾಣೆಗಳಲ್ಲಿ 12ಕ್ಕೂ ಹೆಚ್ಚು ಪ್ರಕರಣಗಳಿವೆ. ಪೊವೈ ಏರಿಯಾ ನಿವಾಸಿಯಾಗಿರುವ ಖೊಪ್ಡಿ, 2013ರಿಂದಲೂ ತಲೆಮರೆಸಿಕೊಂಡಿದ್ದಾನೆ.
ಹೀಗಿರುವಾಗ ಖೊಪ್ಡಿ ಒಮ್ಮೆ ತನ್ನ ಮಾಹಿತಿದಾರನ ಮೂಲಕ ಸವಾಲನ್ನು ಒಳಗೊಂಡ ಒಂದು ಸಂದೇಶವನ್ನು ಕಳುಹಿಸುತ್ತಾನೆ.
ಆ ಸಂದೇಶ ಹೀಗಿರುತ್ತದೆ. ‘ದೇವರಿಗೂ ಕೂಡ ನನ್ನನ್ನು ಹಿಡಿಯಲು ಸಾಧ್ಯವಿಲ್ಲ, ಇನ್ನು ಪೊಲೀಸರಂತೂ ಮರೆತೇ ಬಿಡಿ’ ಎಂದು ಓಪನ್ ಚಾಲೆಂಜ್ ಹಾಕಿರುತ್ತಾನೆ.
ಇರಲಾರದವು ಏನೋ ಹೇಳಿ ಇರುವೆ ಬಿಟ್ಟುಕೊಂಡ ಎಂಬಂತೆ ಖೊಪ್ಡಿಯ ಚಾಲೆಂಜ್ ಅನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಆತನನ್ನು ಹಿಡಿದಿದ್ದಾರೆ. ಖೊಪ್ಡಿ ಇರುವ ಸುಳಿವು ಸಿಕ್ಕಿತು ತಕ್ಷಣ ಸ್ಥಳಕ್ಕೆ ಹೋಗಿ ಆತನನ್ನು ಬಂಧಿಸಿದೆವು ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಉಲ್ಹಾಸ್ ಖೊಲಮ್ ಹೇಳಿದ್ದಾರೆ.
ಖೊಪ್ಡಿ, ರಾಯಲ್ ಪಾಮ್ ಏರಿಯಾದಲ್ಲಿ ದರೋಡೆ ಮಾಡಲು ಪ್ಲಾನ್ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಯಿತು. ಹೀಗಾಗಿ ಪೊಲೀಸ್ ಸಮವಸ್ತ್ರದಲ್ಲಿ ತೆರಳದೇ ಎಲ್ಲರೂ ಸಿವಿಲ್ ಡ್ರೆಸ್ನಲ್ಲಿ ಮಫ್ತಿಯಲ್ಲಿ ಇದ್ದೆವು. ಪ್ಲಾನ್ನಂತೆ ಖೊಪ್ಡಿ ದರೋಡೆಗೆಂದು ಬಂದಾಗ ಶುಕ್ರವಾರ ಆತನನ್ನು ಬಂಧಿಸಿದೆವು ಎಂದು ಉಲ್ಹಾಸ್ ತಿಳಿಸಿದ್ದಾರೆ. ಅಲ್ಲದೆ, ಖೊಪ್ಡಿ ಬಳಿಯಿದ್ದ ಒಂದು ದೇಶಿ ನಿರ್ಮಿತ ಪಿಸ್ತೂಲ್ ಮತ್ತು ಎರಡು ಜೀವಂತ ಸಿಡಿಮದ್ದುಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ಮಾಹಿತಿ ನೀಡಿದರು.
ಸದ್ಯ ಪೊಲೀಸ್ ಬಂಧನದಲ್ಲಿರುವ ಖೊಪ್ಡಿ ವಿರುದ್ಧ ಭಾರತೀಯ ದಂಡಸಂಹಿತೆ (ಐಪಿಸಿ) ಮತ್ತು ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ಖೊಪ್ಡಿ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳಿದ್ದು, ಹಸ್ತಾಂತರ ಮಾಡುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.