ಮುಂಬೈ: ರೈತ ಹೋರಾಟದ ಕಾವು ಹೆಚ್ಚಾದ ಬೆನ್ನಲ್ಲೇ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಮಾಡುವ ನಿರ್ಧಾರ ಮಾಡಿದ್ದಾರೆ. ಜನವರಿ 30ರಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಅಹಮದ್ನಗರ ಜಿಲ್ಲೆಯ ರಾಲೇಗನ್ ಸಿದ್ಧಿಯಲ್ಲಿರುವ ಯಾದವ್ಬಾಬಾ ದೇವಸ್ಥಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಜನವರಿ 30 ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯಾಗಿರುವುದರಿಂದ ಅದೇ ದಿನದಿಂದ ನನ್ನ ಸತ್ಯಾಗ್ರಹ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಅನುಯಾಯಿಗಳಿಗೆ ಅವರವರ ಸ್ಥಳದಿಂದಲೇ ಸತ್ಯಾಗ್ರಹ ನಡೆಸಲು ಅವರು ಕೋರಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ನಾನು ರೈತರ ಪ್ರಮುಖ ಬೇಡಿಕೆಗಳಿಗಾಗಿ ಆಂದೋಲನ ನಡೆಸುತ್ತಿದ್ದೇನೆ. ರೈತರ ವಿಷಯದಲ್ಲಿ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ತೋರುತ್ತಿದೆ.
ರೈತರ ಬಗ್ಗೆ ಸರ್ಕಾರ ಸೂಕ್ಷ್ಮವಾಗಿ ಗಮನಹರಿಸುತ್ತಿಲ್ಲ. ನಾವು ನಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದೆ ಮತ್ತೆ ಮತ್ತೆ ಇಟ್ಟಿದ್ದೇವೆ. ಕಳೆದ ಮೂರು ತಿಂಗಳಲ್ಲಿ ನಾನು ಪ್ರಧಾನಿ ಮತ್ತು ಕೇಂದ್ರ ಕೃಷಿ ಸಚಿವರಿಗೆ ಐದು ಬಾರಿ ಪತ್ರಗಳನ್ನು ಬರೆದಿದ್ದೇನೆ. ಸರ್ಕಾರದ ಪ್ರತಿನಿಧಿಗಳು ಈ ಬಗ್ಗೆ ಚರ್ಚಿಸುತ್ತಿದ್ದಾರೆ ಆದರೆ ಅವರು ಸರಿಯಾದ ಪರಿಹಾರವನ್ನು ನೀಡುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.