ಬೆಂಗಳೂರು : ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕದ ಅಬ್ಬರವು ಕಡಿಮೆಯಾಗುವತ್ತ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ದೈಹಿಕ ಅಂತರವನ್ನು ಕಾಪಾಡಿಕೊಂಡು, ಮದುವೆ, ಸಭೆ, ಸಮಾರಂಭದಲ್ಲಿ 376 ಜನರಿಂದ 500 ಜನರಿಗೆ ಮಿತಿಯನ್ನು ಏರಿಕೆ ಮಾಡಿ, ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕದ ಅಬ್ಬರವು ಕಡಿಮೆಯಾಗಿದ್ದರೂ ಸಹ, ಸೋಂಕು ಹರಡುವಿಕೆಯ ಅಪಾಯವು ಇನ್ನೂ ಚಾಲ್ತಿಯಲ್ಲಿದೆ. ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು ( ಕನಿಷ್ಠ 1 ಮೀಟರ್ ನಷ್ಟು), ಆಗ್ಗಿಂದಾಗ್ಗೆ ಹ್ಯಾಂಡ್ ಸ್ಯಾನಿಟೈಸರ್ ಬಳಕೆ, ಸೋಪು ಹಾಗೂ ನೀರಿನಿಂದ ಕೈಗಳನ್ನು ಶುಚಿಗೊಳಿಸುವುದು, ಥರ್ಮಲ್ ಸ್ಕ್ರೀನಿಂಗ್ ನಡೆಸುವುದು, ಜ್ವರ ಹಾಗೂ ಸೋಂಕಿನ ಇತರ ಲಕ್ಷಣಗಳಿರುವವರನ್ನು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸಿವುದು, ಇತ್ಯಾದಿ ಕೋವಿಡ್-19 ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.
ಯಾವುದೇ ನಿರ್ಧಿಷ್ಟ ಸಮಯದಲ್ಲಿ ಸಾರ್ವಜನಿಕರು ಒಂದೆಡೆ ಸೇರುವ ಸ್ಥಳಗಳಾದ ಸಮಾರಂಭದ ಹಾಲ್ ಗಳು, ಸ್ಟಾಲ್ ಗಳು, ಬೂತ್ ಗಳು ಮತ್ತು ಶೌಚಾಲಯಗಳಲ್ಲಿ ಜನರ ಸಂಖ್ಯೆಯನ್ನು ನಿರ್ಧರಿಸಲು, ಎಂ.ಹೆಚ್.ಎ ಮಾರ್ಗಸೂಚಿಗಳ ಅನ್ವಯ ನಿರ್ಧರಿಸಲಾಗುತ್ತದೆ.
ಇನ್ನು ಯಾವುದೇ ಹಾಲ್, ಸಭಾ ಭವನದಲ್ಲಿ ಪ್ರತಿ ವ್ಯಕ್ತಿಗೆ 3.25 ನಂತೆ ಅಂತರದ ಸ್ಥಳಾವಕಾಶವು ಲಭ್ಯವಿರುವುದು ಕಡ್ಡಾಯವಾಗಿರುತ್ತದೆ. ( 1000 sq. m ವಿಸ್ತೀರ್ಣವಿರುವ ಹಾಲ್ ನಲ್ಲಿ ಗರಿಷ್ಠ 376 ವ್ಯಕ್ತಿಗಳು ಸೇರಬಹುದು. 500 sq. m ವಿಸ್ತೀರ್ಣವಿರುವ ಹಾಲ್ ನಲ್ಲಿ ಗರಿಷ್ಠ 158 ವ್ಯಕ್ತಿಗಳು ಸೇರಬಹುದು)
ಸಾಮಾಜಿಕ ಸಮಾರಂಭಗಳಾದ ಮದುವೆಗಳು, ಜನ್ಮದಿನಾಚರಣೆ, ಮರಣ, ಶವ ಸಂಸ್ಕಾರ, ಸಮಾಧಿ ಮತ್ತು ಇತರೆ ಸಮಾರಂಭಗಳು, ಆಚರಣೆಗಳಲ್ಲಿ ದೈಹಿಕ ದೂರವನ್ನು ಕಾಪಾಡಿಕೊಳ್ಳಲು ಮತ್ತು ಕೋವಿಡ್-19 ಸೋಂಕಿನ ಹರಡುವಿಕೆಯನ್ನು ತಡೆಯುವ ರೀತಿಯಲ್ಲಿ ತೆರೆದ ಮತ್ತು ಮುಚ್ಚಿದ ಪ್ರದೇಶಕ್ಕೆ 3.25 sq. m ಪ್ರತಿ ವ್ಯಕ್ತಿಗೆ ( 1000 sq. m ವಿಸ್ತೀರ್ಣವಿರುವ ಹಾಲ್ ನಲ್ಲಿ ಗರಿಷ್ಠ 376 ವ್ಯಕ್ತಿಗಳು ಸೇರಬಹುದು. 500 sq. m ವಿಸ್ತೀರ್ಣವಿರುವ ಹಾಲ್ ನಲ್ಲಿ ಗರಿಷ್ಠ 158 ವ್ಯಕ್ತಿಗಳು ಸೇರಬಹುದು) ಮೇಲಿನ ಸಮಾರಂಭಗಳಿಗೆ ಗರಿಷ್ಠ 500 ವ್ಯಕ್ತಿಗಳ ಮಿತಿಯನ್ನು ಅನುಮತಿಸಲಾಗಿದೆ ಎಂಬುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.