ಉಳ್ಳಾಲ: ಮಂಗಳೂರು ಪೊಲೀಸ್ ಕಮೀಷನರ್ ಮತ್ತು ಡಿಸಿಪಿ ಸ್ಕೂಟರಿನಲ್ಲಿ ಬಂದು ಅಕ್ರಮ ಮರಳು ಸಾಗಾಟದ ಲಾರಿಯನ್ನು ಹಿಡಿದ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 10 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಲ್ಲರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಲಾಗಿದೆ.
ಟಿಪ್ಪರ್ ಲಾರಿ ಚಾಲಕ ಸೂರಜ್, ಚಂದ್ರಹಾಸ, ರಾಕೇಶ್, ಸನಂ ಹಾಗೂ ಲಾರಿ ಮಾಲೀಕ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ, ಮಂಗಳೂರು ದಕ್ಷಿಣ ಸಂಚಾರಿ
ಠಾಣೆಯ ಎಸ್.ಐ ಚಂದ್ರ ಎಂಬವರನ್ನು ದೂಡಿ ಹಾಕಿ, ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕೆ.ಸಿರೋಡ್ ನಿವಾಸಿ ಇಲ್ಯಾಸ್, ರಹೀಂ ಮತ್ತೆ ಪರಾರಿಯಾದ ಮೂವರ ವಿರುದ್ಧ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಎರಡು ಕಾರುಗಳ ಮೂಲಕ ಮರಳು ಲಾರಿಗಳಿಗೆ ಎಸ್ಕಾಟ್೯ ನೀಡುತ್ತಿದ್ದರು.
ಆಗಿದ್ದೇನು : ಪೊಲೀಸ್ ಕಮೀಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಂ ಶಂಕರ್ ಆಕ್ಟಿವಾ ಸ್ಕೂಟರ್ ಮೂಲಕ ನಸುಕಿನ 3ರ ಸುಮಾರಿಗೆ ತಲಪಾಡಿಯತ್ತ ರೌಂಡ್ಸ್ ನಡೆಸಿದ್ದರು. ಈ ವೇಳೆ ಸೋಮೇಶ್ವರ ಸಮುದ್ರ ತೀರದಿಂದ ಮರಳು ಕಳವುಗೈದು ಕೇರಳಕ್ಕೆ ಸಾಗಾಟ ನಡೆಸುತ್ತಿರುವ ಟಿಪ್ಪರ್ ಲಾರಿಯನ್ನು ಕೆ.ಸಿ ರೋಡ್ ಬಳಿ ನಿಲ್ಲಿಸಲು ಸೂಚಿಸಿದ್ದರು. ಆದರೆ ಪೊಲೀಸ್ ಕಮೀಷನರ್ , ಡಿಸಿಪಿ ಸಾಮಾನ್ಯರಂತೆ ಮಾರುವೇಷದಲ್ಲಿರುವುದು ಅರಿಯದ ಲಾರಿ ಚಾಲಕ ಸೀದಾ ಲಾರಿಯನ್ನು ಮುಂದಕ್ಕೆ ಚಲಾಯಿಸಿದ್ದನು. ಬೆಂಬಿಡದ ಅಧಿಕಾರಿಗಳು ಸ್ಕೂಟರ್ ಮೂಲಕ ಲಾರಿಯನ್ನು ಹಿಂಬಾಲಿಸಿ ಟೋಲ್ ಗೇಟ್ ನಲ್ಲಿ ಅಡ್ಡಹಾಕಿ ಬಳಿಕ ಉಳ್ಳಾಲ ಠಾಣೆಯ ಪೊಲೀಸರನ್ನು ಕರೆಸಿ ಎರಡು ಕಾರು, ಆರು ಬೈಕ್ ಮತ್ತು ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.