ದೆಹಲಿ: ನೂತನ ಕೃಷಿ ಕಾಯ್ದೆ ವಿರುದ್ಧ ಅನ್ನದಾತರ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿಗೆ ಇದೊಂದು ತಲೆನೋವಾಗಿ ಪರಿಣಮಿಸಿದೆ. ಈ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸಲು ಪಂಜಾಬ್ ಬಿಜೆಪಿ ಮಾಡಿದ ಕೃತ್ಯ ಇದೀಗ ಬಿಜೆಪಿಯ ತಲೆಗೆ ಸುತ್ತಿಕೊಂಡಿದ್ದು, ಹುತ್ತದೊಳಗೆ ಕೈಹಾಕಿ ಹಾವಿನಿಂದ ಕಚ್ಚಿಸಿಕೊಂಡ ಪರಿಸ್ಥಿತಿ ಬಿಜೆಪಿಯದ್ದಾಗಿದೆ.
ನೂತನ ಕೃಷಿ ಕಾಯ್ದೆ ರೈತ ಪರವಾಗಿದೆ ಎಂದು ಬಿಂಬಿಸಲು ಪಂಜಾಬ್ ಬಿಜೆಪಿ ಪೋಸ್ಟರ್ ವೊಂದನ್ನು ತಯಾರಿಸಿದ್ದು, ಇದರಲ್ಲಿ ಪಂಜಾಬ್ ನ ವಿಶುವಲ್ ಸ್ಟೋರಿ ಟೆಲ್ಲರ್ ಹರ್ ಪ್ರೀತ್ ಸಿಂಗ್ ಅವರ ಚಿತ್ರವನ್ನು ಬಳಸಿಕೊಂಡಿದೆ. “ನೂತನ ಕೃಷಿ ಕಾಯ್ದೆಯಿಂದ ನನಗೆ ಯಾವುದೇ ತೊಂದರೆ ಇಲ್ಲ, ಕಾಯ್ದೆಗಳಿಂದ ನನಗೆ ಸಹಾಯವಾಗಿದೆ ಎಂದು ಈ ಪೋಸ್ಟರ್ ನಲ್ಲಿ ಬರೆಯಲಾಗಿದೆ.
ಆದರೆ ಬಿಜೆಪಿ ಬಳಸಿದ ಈ ಫೋಟೋದಲ್ಲಿರುವ ವಿಶುವಲ್ ಸ್ಟೋರಿ ಟೆಲ್ಲರ್ ಹರ್ ಪ್ರೀತ್ ಸಿಂಗ್ ಅವರು ರೈತರ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ನೂತನ ಕೃಷಿ ಕಾನೂನಿನ ವಿರುದ್ಧ ಇದ್ದು, ಕೇಂದ್ರ ಸರ್ಕಾರದ ವಿರುದ್ಧ ಅವರು ಕೂಡ ಹೋರಾಟದಲ್ಲಿ ತೊಡಗಿದ್ದಾರೆ. ತನ್ನ ಚಿತ್ರವನ್ನು ಬಳಸಿಕೊಂಡಿರುವುದು ತಿಳಿದ ತಕ್ಷಣವೇ ಹರ್ ಪ್ರೀತ್ ಸಿಂಗ್ತಕ್ಷಣವೇ ತಾವು ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿರುವ ಟೆಂಟ್ ನ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೇ, ತನ್ನ ಫೋಟೋವನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.
ತನ್ನ ಗೆಳೆಯನೊಬ್ಬನ ಪ್ರಾಜೆಕ್ಟ್ ಗಾಗಿ 2015ರಲ್ಲಿ ತೆಗೆಯಲಾಗಿದ್ದ ಫೋಟೋವನ್ನು ನಾನು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದೆ. ಆದರೆ, ಈ ಫೋಟೋವನ್ನು ದುರ್ಬಳಕೆ ಮಾಡಿಕೊಂಡಿರುವ ಬಿಜೆಪಿ, ತಾನು ಕೃಷಿ ಕಾಯ್ದೆ ಪರವಾಗಿದ್ದೇನೆ ಎನ್ನುವಂತೆ ಬಿಂಬಿಸಿದೆ ಎಂದು ಅವರು ಪಂಜಾಬ್ ಬಿಜೆಪಿ ಘಟಕಕ್ಕೆ ಲೀಗಲ್ ನೊಟೀಸ್ ನೀಡಿದ್ದಾರೆ.