ಮಂಡ್ಯ: ರಾಧಿಕಾ ಕುಮಾರಸ್ವಾಮಿ ಯಾರ್ರಿ ಅದು? ಅವರ್ಯಾರೆಂದು ನನಗೆ ಗೊತ್ತಿಲ್ಲ… ಅದೇನೋ ಕೇಸ್ ಅನ್ನುತ್ತಿದ್ದೀರಲ್ಲ, ಗೊತ್ತಿಲ್ಲದವರ ಬಗ್ಗೆ ನಾನ್ಯಾಕೆ ಪ್ರತಿಕ್ರಿಯೆ ನೀಡಬೇಕು…?
ಹೀಗೆಂದು ಹೇಳಿದವರು ಬೇರ್ಯಾರೂ ಅಲ್ಲ…. ಖುದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ!
ಮಂಡ್ಯ ಜಿಲ್ಲೆಯ ಶ್ರೀರಂಭಪಟ್ಟಣ ತಾಲೂಕಿನ ನೇರಳೆಕೆರೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಪತ್ರಕರ್ತರು ಪ್ರಶ್ನಿಸಿದಾಗ ರಾಧಿಕಾ ಕುಮಾರಸ್ವಾಮಿ ಅವರ ಕುರಿತಂತೆ ಈ ರೀತಿ ಪ್ರತಿಕ್ರಿಯೆ ನೀಡಿದರು.
ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ಕೊಟ್ಟಿದ್ದಾರೆ. ಅದರ ಬಗ್ಗೆ ಏನ್ ಹೇಳ್ತೀರಿ ಎಂದು ಮಾಧ್ಯಮದವರು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರವಾಗಿ ಕುಮಾರಸ್ವಾಮಿ ಅವರು, ಅವರ್ಯಾರು ಎಂದೇ ನನಗೆ ಗೊತ್ತಿಲ್ಲ. ಗೊತ್ತಿಲ್ಲದಿದ್ದವರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ? ಗೊತ್ತಿಲ್ಲದ ಕುಟುಂಬದವರ ಬಗ್ಗೆ ನನಗೆ ಕೇಳಬೇಡಿ ಎಂಬುದಾಗಿ ಪ್ರತಿಕ್ರಿಯಿಸಿ, ಏನೊಂದು ವಿಷಯ ತಿಳಿಸಲು ನಿರಾಕರಿಸಿದರು.
ಅದೇ ವೇಳೆ ರಾಜಕೀಯದ ಈಗಿನ ಸ್ಥಿತಿಯ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಸದ್ಯದ ರಾಜಕೀಯ ಪರಿಸ್ಥಿತಿ, ಹಾಗೂ ರಾಜ್ಯ ಸರ್ಕಾರದ ಬಗ್ಗೆ ನಾನೇನೂ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ನನ್ನ ಉದ್ದೇಶ ಏನಿದ್ದರೂ ಇನ್ನೂ ಎರಡೂವರೆ ವರ್ಷಗಳ ನಂತರ. ಈಗಿನ ಸರ್ಕಾರದ ಅವಧಿ ಮುಕ್ತಾಯಗೊಂಡ ನಂತರವೇ ಅದರ ಬಗ್ಗೆ ಯೋಚನೆ ಮಾಡುತ್ತೇನೆ ಎಂದರು.