ಉಳ್ಳಾಲ;ಬೀಚ್ ಬಸ್ಸು ನಿಲ್ದಾಣ ಬಳಿ ರಾತ್ರಿ ಹೊತ್ತು ವಿನಾ ಕಾರಣ ತಿರುಗುತ್ತಿದ್ದವರನ್ನು ಠಾಣೆ ಮಟ್ಟಿಲೇರಿಸಿದ ಕಮಿಷನರ್ ಶಶಿಕುಮಾರ್ ಇದೀಗ ಎರಡನೇ ಬಾರಿಗೆ ಉಳ್ಳಾಲಕ್ಕೆ ಆಗಮಿಸಿ ಉಳ್ಳಾಲ ದರ್ಗಾ ಸೇರಿದಂತೆ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ್ದು, ಉಳ್ಳಾಲದಾದ್ಯಂತ ಪಾದಯಾತ್ರೆ ನಡೆಸಿ ಕೋಡಿಯಲ್ಲಿ ಯುವಕರೊಂದಿಗೆ ಕ್ರಿಕೆಟ್ ಆಟವಾಡಿ ಪೊಲೀಸರು ಜನರೊಂದಿಗಿದ್ದಾರೆ ಎನ್ನುವ ಸಂದೇಶವನ್ನು ನೀಡಿದ್ದಾರೆ.
ಶನಿವಾರ ಬೀಫ್ ಸ್ಟಾಲ್ಗೆ ಬೆಂಕಿ ಬಿದ್ದ ಘಟನೆಯ ನಿಮಿತ್ತ ಆಗಮಿಸಿದ್ದ ಕಮಿಷನರ್ ಉಳ್ಳಾಲದಲ್ಲಿ ಕೋಮು ಸೌಹಾರ್ದತೆ ನಿಟ್ಟಿನಲ್ಲಿ ಉಳ್ಳಾಲ ದರ್ಗಾ ಮತ್ತು ಮೊಗವೀರಪಟ್ಣದ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ಧಾರ್ಮಿಕ ಮುಖಂಡರೊಂದಿಗೆ ಚರ್ಚೆ ನಡೆಸಿದರು.
ಕೋಡಿಯಲ್ಲಿ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾಟ ಸ್ಥಳಕ್ಕೆ ಬಂದ ಕಮಿಷನರ್ ಅವರನ್ನು ಯುವಕರು ಕ್ರಿಕೆಟ್ ಆಡುವಂತೆ ಮನವಿ ಮಾಡಿದ್ದು ಮನವಿಗೆ ಸ್ಪಂದಿಸಿದ ಶಶಿಕುಮಾರ್ ಬ್ಯಾಟಿಂಗ್ ನಡೆಸಿ ಯುವಕರ ಗಮನ ಸೆಳೆದರು. ಡಿಸಿಪಿ ಹರಿರಾಂ, ಉಳ್ಳಾಲ ಠಾಣಾಧಿಕಾರಿ ಸಂದೀಪ್ ಎಂ.ಜಿ., ಸಿಸಿಬಿ ಇನ್ಸ್ಪೆಕ್ಟರ್ ಮಹೇಶ್ ಕುಮಾರ್, ಪ್ರಕಾಶ್ ಮೊದಲಾದವರಿದ್ದರು.