ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಕೆಎಎಸ್ ಅಧಿಕಾರಿ ಸುಧಾ ವಿರುದ್ಧ ಸರ್ಕಾರ ಕಟು ನಿರ್ಧಾರ ಕೈಗೊಂಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭ್ರಷ್ಟ ಅಧಿಕಾರಿ ತಲೆದಂಡವಾಗಿದೆ. ಕೋಟಿ ಕೋಟಿ ಅಕ್ರಮ ಆಸ್ತಿ ದಾಖಲೆ, ಅಕ್ರಮ ಹಣ ಸಂಪಾದನೆ ಆರೋಪದಡಿಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.ಬಿಡಿಎ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸುಧಾ ಮನೆ ಮೇಲೆ, ಇತ್ತೀಚೆಗೆ ಎರಡು ಬಾರಿ ಎಸಿಬಿ ರೇಡ್ ಮಾಡಿತ್ತು. ರೇಡ್ ಮಾಡಿದ್ದ ವೇಳೆ ಕೋಟಿ ಕೋಟಿ ಅಕ್ರಮ ಆಸ್ತಿ ದಾಖಲೆ ಪತ್ತೆಯಾಗಿತ್ತು. ಅಲ್ಲದೆ, ಬ್ರೋಕರ್ಗಳ ಜೊತೆ ಸೇರಿಕೊಂಡು ಅಕ್ರಮ ಹಣ ಸಂಪಾದಿಸಿದ್ದ ಆರೋಪವನ್ನು ಕೂಡ ಸುಧಾ ಹೊತ್ತಿದ್ದರು.ಈ ಸಂಬಂಧ, ಕೆಲ ವರ್ಷಗಳ ಹಿಂದೆ ಎಸಿಬಿಗೆ ಖಾಸಗಿ ವ್ಯಕ್ತಿಗಳಿಂದ ದೂರು ದಾಖಲಾಗಿತ್ತು.
ದೂರಿನ ಅನ್ವಯ ಇತ್ತೀಚೆಗೆ ಎಸಿಬಿ ದಾಳಿ ನಡೆಸಿತ್ತು. ಇದೀಗ, ಅಮಾನತು ಕುರಿತು ದೂರುದಾರ ಟಿ.ಜೆ. ಅಬ್ರಹಾಂ ಮಾಹಿತಿ ನೀಡಿದ್ದಾರೆ. ಡಿಪಿಎಆರ್ನಿಂದ ಖಚಿತ ಮಾಹಿತಿ ದೊರಕಿದೆ. ಇನ್ನು ಅಮಾನತು ಆದೇಶದ ಪ್ರತಿ ಸುಧಾ ಕೈಸೇರುವೊದೊಂದೇ ಬಾಕಿ ಉಳಿದಿದೆ.