ವಿಟ್ಲ ವಲಯ ಎಸ್ ಡಿ ಪಿ ಐ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಾಕಿರುವ ಘಟನೆ ವಿಟ್ಲದ ಮೇಗಿನಪೇಟೆಯಲ್ಲಿ ನಡೆದಿದೆ.
ಸೋಮವಾರ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು, ಆದಿತ್ಯವಾರ ರಾತ್ರಿ ಈ ಕೃತ್ಯ ನಡೆದಿದೆನ್ನಲಾಗಿದೆ. ಕಚೇರಿಯ ಮುಂಭಾಗದ ಬಾಗಿಲಿನ ಭಾಗಕ್ಕೆ ಬೆಂಕಿ ಹಚ್ಚಿದ್ದು, ಸ್ಥಳದಲ್ಲಿ ಪೈಂಟ್ ಡಬ್ಬಗಳು ಪತ್ತೆಯಾಗಿದ್ದು, ಪೈಂಟ್ ಹಚ್ಚಿ ಬೆಂಕಿ ಹಾಕಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಇದರಿಂದ ಕಚೇರಿಯ ಮುಂಭಾಗ ಹಾನಿಗೊಂಡಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಎಸ್ ಡಿ ಪಿ ಐ ಜಿಲ್ಲಾ ಮುಖಂಡ ಕಲಂದರ್ ಪರ್ತಿಪ್ಪಾಡಿ ಹಾಗೂ ಶಾಕೀರ್ ಅಳಕೆಮಜಲು ,ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಸ್ ಡಿ ಪಿ ಐ ಬೆಂಬಲಿತರು ಅಭೂತಪೂರ್ವ ಗೆಲುವು ಸಾಧಿಸಿದ್ದರು. ಇದಾದ ಬಳಿಕ ಪಕ್ಷದ ಮೇಲೆ ಸುಳ್ಳು ಆರೋಪ ಮಾಡುವ ಮೂಲಕ ಪಕ್ಷವನ್ನು ಕುಗ್ಗಿಸುವ ಕಾರ್ಯ ಮಾಡಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಈ ಘಟನೆ ನಡೆದಿದೆ. ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕೆಂದು ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.