ಬೆಂಗಳೂರು : ಮಾಜಿ ಮುಖ್ಯಮಂತ್ರಿ ದಿ. ಗುಂಡೂರಾವ್ ಅವರ ಪತ್ನಿ, ದಿನೇಶ್ ಗುಂಡೂರಾವ್ ಅವರ ತಾಯಿ ವರಲಕ್ಷ್ಮಿ ಗುಂಡೂರಾವ್ ಅವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ವರಲಕ್ಷ್ಮೀ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು ಎನ್ನಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ವರಲಕ್ಷ್ಮಿ ಗುಂಡೂರಾವ್ ಅವರು ಮೂವರು ಪುತ್ರರಾದ ದಿನೇಶ್ ಗುಂಡೂರಾವ್, ಮಹೇಶ್ ಗುಂಡೂರಾವ್ ಮತ್ತು ರಾಜೇಶ್ ಗುಂಡೂರಾವ್ ಅವರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ದೇವನಹಳ್ಳಿಯ ತೋಟದಲ್ಲಿ ಇಂದು ನಡೆಯಲಿದೆ ಎಂದು ವರದಿಯಾಗಿದೆ.
ದಿ. ಗುಂಡೂರಾವ್ ಅವರು 1993ರ ಆಗಸ್ಟ್ನಲ್ಲಿ ನಿಧನರಾಗಿದ್ದರು.
ಅವರ ನಿಧನದ ನಂತರ 1996ರಲ್ಲಿ ವರಲಕ್ಷ್ಮಿ ಗುಂಡೂರಾವ್ ಕೂಡ ರಾಜಕೀಯಕ್ಕೆ ಇಳಿದಿದ್ದರು. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಅವರು ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಬಿಜೆಪಿಯ ಅನಂತಕುಮಾರ್ ಎದುರು ಸೋಲು ಅನುಭವಿಸಿದ್ದರು.