ಎಚ್.ಡಿ.ಕೋಟೆ: ಜೀವನೋ ಪಾಯಕ್ಕಾಗಿ ನೆರೆಯ ಆಂಧ್ರಪ್ರದೇಶದಿಂದ ಆಗಮಿಸಿ ಬಯಲಿನಲ್ಲಿ ಟೆಂಟ್ ಹಾಕಿಕೊಂಡು
ಕಗ್ಗತ್ತಲಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತ ಕುಟುಂಬಗಳಿಗೆ ಸೋಲಾರ್ ಲೈಟ್ ಕಲ್ಪಿಸುವ ಮೂಲಕ ಎಎಸ್ಐ ದೊರೆಸ್ವಾಮಿ
ಮಾನವೀಯತೆ ಮೆರೆದಿದ್ದಾರೆ.
ಎಚ್.ಡಿ.ಕೋಟೆ ಪೊಲೀಸ್ ಠಾಣೆ ಎಎಸ್ಐ ದೊರೆಸ್ವಾಮಿ, 10 ಸಾವಿರ ರೂ. ಮೌಲ್ಯದ 3 ಸೋಲಾರ್ ದೀಪಗಳನ್ನು ಕೊಡುಗೆಯಾಗಿ ನೀಡಿ, ನಿರಾಶ್ರಿತರ ಕುಟುಂಬಗಳಿಗೆ ಬೆಳಕು ಮೂಡಿಸಿದ್ದಾರೆ. ಪಟ್ಟಣದಲ್ಲಿ ಒಂದು ವರ್ಷದ ಹಿಂದೆ
ಆಂಧ್ರಪ್ರದೇಶದಿಂದ ಸುಮಾರು 6-7 ಬಡ ಕುಟುಂಬಗಳು 25ಕ್ಕೂ ಅಧಿಕ ಮಂದಿ ಪುಟಾಣಿಗಳೊಟ್ಟಿಗೆ ಟೆಂಟ್ ನಿರ್ಮಿಸಿಕೊಂಡು ನೆಲೆಯೂರಿದ್ದಾರೆ. ತಲೆ ಕೂದಲು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಈ ಟೆಂಟ್ ಸಮೀಪ ಭಾರೀ ಗಾತ್ರದ ವಿಷ ಪೂರಿತ ಹಾವು ಕಾಣಿಸಿಕೊಂಡಿತ್ತು ಅಲ್ಲದೇ ಈ ಟೆಂಟ್ಗಳು ಬಟಬಯಲಿನಲ್ಲಿ ಹಾಕಿ ರುವುದರಿಂದ ಹುಳಗಳು, ಹಾವು, ಚೇಳುಗಳು ಬರುವುದು ಸಾಮಾನ್ಯವಾಗಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಎಎಸ್ಐ ದೊರೆ ಸ್ವಾಮಿ ಅವರು ಸ್ಥಳಕ್ಕೆ ಆಗಮಿಸಿ, ನಿರಾಶ್ರಿತ ಕುಟುಂಬಗಳ ದುಸ್ಥಿತಿಯನ್ನು
ಕಂಡು, ತಮ್ಮ ಸ್ವಂತ ಹಣದಿಂದ ಸೋಲಾರ್ ದೀಪ ಹಾಕಿಸಿಕೊಟ್ಟಿದ್ದಾರೆ. ಸಮಾಜಮುಖೀ ಕೆಲಸಗಳ ಮೂಲಕ ಜನ ಮನ್ನಣೆ ಪಡೆದಿರುವ ಎಎಸ್ಐ ದೊರೆಸ್ವಾಮಿ ಅವರು ಈ ಹಿಂದೆ ನಾಲ್ಕೈದು ಕಿ.ಮೀ. ಹದಗೆಟ್ಟಿದ್ದ ರಸ್ತೆಯನ್ನು ಸ್ವಂತ ಹಣ ವ್ಯಯಿಸಿ ದುರಸ್ತಿಪಡಿಸಿದ್ದರು.
ಜೊತೆಗೆ ಇಬ್ಬರು ಅನಾಥ ಬಾಲಕಿಯರನ್ನು ದತ್ತು ಪಡೆದು ಅವರ ಶಿಕ್ಷಣವನ್ನು ಸಂಪೂರ್ಣ ಹೊಣೆಯನ್ನು ಹೊತ್ತಿದ್ದಾರೆ.
ಅಲ್ಲದೇ ಈ ಅವರಿಗೆ ಮನೆಯನ್ನು ನವೀಕರಣಗೊಳಿಸಿ, ಆಸರೆಯಾಗಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಬಡವರಿಗೆ ಆಹಾರ ಕಿಟ್, ಮಾಸ್ಕ್ಗಳನ್ನು ದೊರೆಸ್ವಾಮಿ ಉಚಿತವಾಗಿ ವಿತರಿಸಿದ್ದರು.