ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ಇಂದು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ತಮ್ಮ ಸಹೋದರ ರವಿರಾಜ್ ಜೊತೆಗೆ ಸಿಸಿಬಿ ಕಚೇರಿಗೆ ಬಂದಿದ್ದಾರೆ.
ಆರ್ಎಸ್ಎಸ್-ಬಿಜೆಪಿ ಮುಖಂಡರ ಹೆಸರು ಹೇಳಿಕೊಂಡು ವಂಚಿಸುತ್ತಿದ್ದ ಆರೋಪದ ಮೇಲೆ ಅರೆಸ್ಟ್ ಆಗಿರುವ ಯುವರಾಜ್ ಅಲಿಯಾಸ್ ಸ್ವಾಮಿ, ಡೀಲ್ವೊಂದರ ಭಾಗವಾಗಿ ರಾಧಿಕಾ ಅವರ ಅಕೌಂಟ್ಗೆ ಕೋಟ್ಯಾಂತರ ರೂಪಾಯಿ ಹಣ ವರ್ಗಾವಣೆ ಮಾಡಿದ್ದಾನೆಂಬ ಆರೋಪ ಕೇಳಿಬಂದಿತ್ತು. ಇದೇ ಪ್ರಕರಣ ಸಂಬಂಧ ರಾಧಿಕಾ ಸಹೋದರ ರವಿರಾಜ್ರನ್ನ ಒಂದು ವಾರದ ಹಿಂದೆ ಸಿಸಿಬಿ ವಿಚಾರಣೆಗೆ ಒಳಪಡಿಸಿತ್ತು.
ಇದರ ಬೆನ್ನಲ್ಲೇ ಮಾಧ್ಯಮಗಳ ಎದುರು ಸ್ಪಷ್ಟನೆ ನೀಡಿದ್ದ ರಾಧಿಕಾ ಕುಮಾರಸ್ವಾಮಿ, ಯುವರಾಜ್ ಕೋಟ್ಯಾಂತರ ರೂಪಾಯಿ ಹಣ ಜಮೆ ಮಾಡಿದ್ದಾರೆ ಅನ್ನೋದೆಲ್ಲಾ ಸುಳ್ಳು ಎಂದು ಹೇಳಿದ್ದರು. ಯುವರಾಜ್ರ ಪತ್ನಿಯ ಹೆಸರಿನ ಬ್ಯಾನರ್ನಲ್ಲಿ ನಾನು ಐತಿಹಾಸಿಕ ಸಿನಿಮಾವೊಂದನ್ನ ಮಾಡಲು ಒಪ್ಪಿದ್ದೆ.
ಅಕ್ಕಾಗಿ 15 ಲಕ್ಷ ರೂಪಾಯಿ ಅಡ್ವಾನ್ಸ್ ಹಣವನ್ನ ಯುವರಾಜ್ ಹಾಕಿದ್ದಾರೆ. ಮತ್ತೊಬ್ಬರ ಅಕೌಂಟ್ನಿಂದ ₹60 ಲಕ್ಷ ಹಣ ಬಂದಿದೆ, ಆದ್ರೆ ಆ ವ್ಯಕ್ತಿ ಯಾರು ಅನ್ನೋದು ನನಗೆ ಗೊತ್ತಿಲ್ಲ ಎಂದಿದ್ದರು.
ಇದರ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ರಾಧಿಕಾ ಅವರಿಗೆ ನಿನ್ನೆ ನೋಟಿಸ್ ಕೊಟ್ಟಿದ್ದರು. ಈ ಹಿನ್ನೆಲೆ ರಾಧಿಕಾ ಇಂದು ಸಿಸಿಬಿ ಅಧಿಕಾರಿಗಳ ಎದುರು ಹಾಜರಾಗಿದ್ದಾರೆ. ಸಿಸಿಬಿ ಕಚೇರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಿಸಿಬಿ ಇನ್ಸ್ ಪೆಕ್ಟರ್ ಅಂಜುಮಾಲಾ ರಾಧಿಕಾ ಅವರನ್ನ ವಿಚಾರಣೆ ಮಾಡಲಿದ್ದಾರೆ.