ತಲಕಾವೇರಿಗೆ ತೆರಳಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್…!!!
ಬೆಂಗಳೂರು: ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ಇಂದು ಸಂಸಾರ ಸಮೇತರಾಗಿ ಕೊಡಗು ಜಿಲ್ಲೆಯ ಅಧಿಕೃತ ಬೇಟಿಗಾಗಿ ಭಾರತೀಯ ವಾಯುಪಡೆಯ ವಿಶೇಷ ಹೆಲಿಕ್ಯಾಪ್ಟರ್ನಲ್ಲಿ ಬೆಂಗಳೂರಿನ ಎಚ್.ಎ.ಎಲ್. ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿದರು.
ರಾಷ್ಟ್ರದ ಪ್ರಥಮ ಮಹಿಳೆ ಸವಿತಾ ಕೋವಿಂದ ಅವರೂ ರಾಷ್ಟ್ರಪತಿಗಳ ಜೊತೆಯಲ್ಲಿ ಇಂದು ಕಾವೇರಿ ಉಗಮಸ್ಥಾನ ತಲಾಕಾವೇರಿಗೆ ಬೇಟಿ ನೀಡುವರು. ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಸಾಧ್ಯತೆಗಳಿಗೆ. ಜೊತೆಗೆ ಕಾವೇರಿ ನದಿ ಉಗಮ ಸ್ಥಳವನ್ನೂ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ಪತ್ನಿ ಸಮೇತರಾಗಿ ವೀಕ್ಷಣೆ ಮಾಡಲಿದ್ದಾರೆ.
ಭಾಗಮಂಡಲದ ಕಾವೇರಿ ಕಾಲೇಜು ಹೆಲಿಪ್ಯಾಡ್ಗೆ ಆಗಮಿಸಲಿರುವ ರಾಮನಾಥ ಕೋವಿಂದ್ ನಂತರ ಕಾವೇರಿ ನದಿ ಉಗಮಸ್ಥಾನ ತಲಕಾವೇರಿ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಮಡಿಕೇರಿಯ ಹೆಲಿಪ್ಯಾಡ್ಗೆ ಆಗಮಿಸಲಿದ್ದಾರೆ. ಮಡಿಕೇರಿಗೆ ಆಗಮಿಸಿದ ನಂತರ ರಾಷ್ಟ್ರಪತಿ ಸರಕಾರದ ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ಜನರಲ್ ತಿಮ್ಮಯ್ಯ ಸ್ಮಾರಕ ಭವನ, ವಸ್ತು ಸಂಗ್ರಹಾಲಯವನ್ನು ಉದ್ಘಾಟನೆ ಮಾಡಲಿದ್ದಾರೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಜೊತೆಗೆ ಭಿಗಿ ಭದ್ರತೆ ಮಾಡಿಕೊಳ್ಳಲಾಗಿದ್ದು, ತಲಕಾವೇರಿಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಭಾಗಮಂಡಲದಿಂದ ತಲಕಾವೇರಿ ತನಕ 8 ಕಿ.ಮೀ. ಅಂತರದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಭಾಗವಹಿಸಲಿದ್ದಾರೆ.
ಕೊಡಗು ಜಿಲ್ಲೆಯ ಉಸ್ತುವಾರಿ ಹಾಗೂ ವಸತಿ ಸಚಿವ ವಿ. ಸೋಮಣ್ಣ ಅವರು ಸಹ ರಾಷ್ಟ್ರಪತಿಗಳ ಜೊತೆಗೆ ಬೆಂಗಳೂರಿನಿಂದ ಪ್ರಯಾಣಿಸಿದರು. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿ ಅವರಿಗೆ ಬೀಳ್ಕೊಡುಗೆ ನೀಡಿದರು.