ಬೆಂಗಳೂರು,ಜ.29– ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಅದರ ವಿರುದ್ಧ ನಿಲ್ಲುತ್ತೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಬೇಕು ಎಂಬ ಅಪೇಕ್ಷೆ ಇದೆ. ಇನ್ನು ಎರಡು ವರ್ಷ ಸ್ಥಿರ ಸರ್ಕಾರನೀಡಬೇಕು.
ಹಾಗಾಗಿ ಪಕ್ಷ ಮತ್ತು ಮುಖ್ಯಮಂತ್ರಿಗೆ ಮುಜುಗರ ಆಗಬಾರದು ಎಂದು ಭಾವಿಸಿದ್ದೇವೆ ಎಂದರು.
ಸಮಾನ ಮನಸ್ಕ ಬಹಳಷ್ಟು ಬಿಜೆಪಿ ಶಾಸಕರು ಇದ್ದೇವೆ. ಸರ್ಕಾರ ಸ್ಥಿರವಾಗಿರಬೇಕು ಎಂಬುದು ನಮ್ಮ ಅಪೇಕ್ಷೆ. ಸಚಿವ ಆನಂದ್ ಸಿಂಗ್ ಅವರು ಮೊದಲು ರಾಜೀನಾಮೆ ಕೊಟ್ಟು ಬಂದವರು.
ಸರ್ಕಾರ, ನಾಯಕತ್ವದ ವಿರುದ್ಧ ನಮ್ಮ ಹೋರಾಟವಿಲ್ಲ. ಆದರೆ ಕೆಲವರು ಇಂಥದ್ದೇ ಖಾತೆ ಬೇಕು ಎಂದು ಕೇಳುತ್ತಿದ್ದಾರೆ.
ವ್ಯಾಪಾರಕ್ಕಾಗಿ ಸಚಿವ ಸ್ಥಾನ ಬೇಕಾ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಇದರಿಂದ ಮುಖ್ಯಮಂತ್ರಿ ಹಾಗೂ ಸರ್ಕಾರದ ವರ್ಚಸ್ಸು ಕಡಿಮೆಯಾಗಿದೆ. ಎಲ್ಲ ಸಚಿವರು ಇಂಥದ್ದೇ ಖಾತೆ ಬೇಕು ಎಂದು ಕೇಳಿಲ್ಲ.
ಕೆಲವರು ಬೇಕು ಎಂದು ಕೇಳುತ್ತಿದ್ದಾರೆ ಎಂದರು. ಪಕ್ಷ ಅಧಿಕಾರಕ್ಕೆ ಬರಬೇಕೆಂದು ಸಂಘಟನೆ ಮಾಡಿದ್ದು, ಆದರೆ ಕೆಲವರು ಎರಡುಮೂರು ಖಾತೆ ಬೇಕೆಂದು ಕುಳಿತಿದ್ದಾರೆ.
ಕೆಲಸ ಮಾಡಿದ್ದು ನಾವು ಅಧಿಕಾರ ಬೇರೆಯವರು ಅನುಭವಿಸುತ್ತಿದ್ದಾರೆ. ಮೂರು ಬಾರಿ ತಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರದ ಜನ ಕಾಯುತ್ತಿದ್ದಾರೆ. ಅಬಕಾರಿ ಖಾತೆ ಕೊಟ್ಟಾಗ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ.
ಬೇರೆ ಪಕ್ಷದಿಂದ ಬಂದವರನ್ನು ಗೌರವಿಸುತ್ತಾರೆ. ನಾವು ಹಿರಿಯರಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬಹಿರಂಗವಾಗಿ ಹೇಳಿಕೆ ನೀಡುವುದಿಲ್ಲ. ಶಾಸಕಾಂಗ ಪಕ್ಷದ ಸಭೆ ಕರೆದಾಗ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳ ಬಳಿ ಹೇಳುತ್ತೇನೆ.
ಸಚಿವ ಸ್ಥಾನ ಕೊಡುವುದು ಗೌರವಕ್ಕಾಗಿ ದೊಡ್ಡ ಖಾತೆಯೇ ಯಾಕೆ ಬೇಕು? ನಮ್ಮ ಪೂರ್ವಜನರು ತೆಂಗಿನ ಮರ ನೆಟ್ಟಿದ್ದರು.
ಬೇರೆಯವರು ಎಳನೀರು ಕುಡಿಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.