ಧಾರವಾಡ: ಹು-ಧಾ ಬೈಪಾಸ್ ರಸ್ತೆಯ ಇಟಿಗಟ್ಟಿ ಬಳಿ ಜ. 15ರಂದು ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ 11 ಜನರಿಗೆ ಕೆಲಗೇರಿ ಹಾಗೂ ಸುತ್ತಲಿನ ಬಡಾವಣೆಗಳ ಗ್ರಾಮಸ್ಥರು ಶನಿವಾರ ಸಾಮೂಹಿಕ ಪುಣ್ಯತಿಥಿ ಆಚರಿಸಿ ಗಮನ ಸೆಳೆದರು.
ಅಪಘಾತ ಸಂಭವಿಸಿ ಶನಿವಾರಕ್ಕೆ ಒಂಬತ್ತು ದಿನ. ಈ ಹಿನ್ನೆಲೆಯಲ್ಲಿ ಸಾಮೂಹಿಕ ಪುಣ್ಯತಿಥಿ ನೆರವೇರಿಸಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಕೆಲಗೇರಿ ಬೈಪಾಸ್ ರಸ್ತೆಯ ಬದಿ ಮೃತರ ಭಾವಚಿತ್ರದೊಂದಿಗೆ ಒಂದು ನಿಮಿಷ ಮೌನಾಚರಣೆ ಮಾಡಿ, ನೈವೇದ್ಯ ಮಾಡಿ ಪುಣ್ಯತಿಥಿ ಸಂದರ್ಭದಲ್ಲಿ ನಡೆಯುವ ಎಲ್ಲ ರೀತಿಯ ಪೂಜೆಗಳನ್ನು ಮಾಡಲಾಯಿತು.
ಈ ರಸ್ತೆಯಲ್ಲಿ ಮುಂದೆ ಅಪಘಾತಗಳು ಆಗದಂತೆ ಶಾಂತಿ ಮಾಡಲಾಗಿದೆ.
ಜೊತೆಗೆ ಸರ್ಕಾರ ಎಚ್ಚೆತ್ತುಕೊಂಡು ಇನ್ನಾದರೂ ಈ ರಸ್ತೆ ಅಗಲೀಕರಣ ಕಾರ್ಯ ಮಾಡಲಿ ಎನ್ನುವುದು ನಮ್ಮ ಉದ್ದೇಶ ಎಂದು ಕೆಲಗೇರಿಯ ಗ್ರಾಮಸ್ಥ ಮಂಜುನಾಥ ಹೇಳಿದರು. ಬಸವರಾಜ ಕೊರವರ, ರುದ್ರಯ್ಯ ಕಲ್ಮಠ, ನಾಗೇಶ ತಲವಾಯಿ, ಬಸಯ್ಯ ಹಿರೇಮಠ, ಗಿರೀಶ ಪೂಜಾರ, ಮಲ್ಲಯ್ಯ ಹೊಂಗಲಮಠ ಇದ್ದರು.