ರಾಮನಗರ, ಜನವರಿ 31; ರಾಮನಗರದ ಬಿಡದಿಯಲ್ಲಿರುವ ಟೊಯೋಟಾ ಕಾರು ತಯಾರಿಕಾ ಘಟಕದ ಕಾರ್ಮಿಕರು 84 ದಿನಗಳಿಂದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಸದನದಲ್ಲಿ ಈ ಕುರಿತು ವಿಚಾರ ಪ್ರಸ್ತಾಪಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಭಾನುವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರತಿಭಟನೆ ನಡೆಸುತ್ತಿರುವ ಕಾರ್ಮಿಕರನ್ನು ಭೇಟಿ ಮಾಡಿದರು. ಬಿಡದಿಯಲ್ಲಿರುವ ಟೊಯೋಟಾ ಘಟಕದ ಬಳಿ ಸಿದ್ದರಾಮಯ್ಯ ಕಾರ್ಮಿಕರ ಅಹವಾಲುಗಳನ್ನು ಕೇಳಿದರು.
ಬೈರಮಂಗಲ ಜಂಕ್ಷನ್ ಬಳಿಯಿಂದ ಟೊಯೋಟಾ ಕಾರ್ಮಿಕರು ಬೈಕ್ ಜಾಥಾ ಮೂಲಕ ಸಿದ್ದರಾಮಯ್ಯ ಅವರನ್ನು ಕಂಪನಿ ಬಳಿ ಕರೆತಂದರು.
ಮಾಜಿ ಶಾಸಕ ಎಸ್. ಸಿ. ಬಾಲಕೃಷ್ಣ, ಎಂಎಲ್ಸಿಗಳಾದ ಸಿ. ಎಂ. ಲಿಂಗಪ್ಪ, ರವಿ, ರಾಮನಗರ ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್ ಸಿದ್ದರಾಮಯ್ಯ ಜೊತೆಗಿದ್ದರು.
ಕಾರ್ಮಿಕರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, “ನಿಮ್ಮ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ” ಎಂದು ಕಾರ್ಮಿಕರಿಗೆ ಭರವಸೆ ನೀಡಿದರು.
“ಕಾರ್ಮಿಕರ ಸಮಸ್ಯೆ ಬಗೆ ಹರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಘಟಕ ಲಾಕ್ ಔಟ್ ಆದಾಗ ಸರ್ಕಾರ ಕಾರ್ಮಿಕರ ಪರವಾಗಿ ನಿಲ್ಲಬೇಕಿತ್ತು. ಸರ್ಕಾರದ ಬೇಜವಾಬ್ದಾರಿತನದಿಂದ ಕಾರ್ಮಿಕರು ಇಷ್ಟು ದಿನ ಹೋರಾಟ ಮಾಡಬೇಕಾಗಿದೆ” ಎಂದು ಸಿದ್ದರಾಮಯ್ಯ ಆರೋಪಿಸಿದರು.
“ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಇರುವುದ ಏಕೆ?. ಸಿಎಂ ಹಾಗೂ ಸಚಿವರು ಯಾಕೆ ಇದ್ದಾರೆ?. ಆಡಳಿತ ಮಂಡಳಿಯವರನ್ನು ಒಂದಲ್ಲ ಎರಡು ಬಾರಿ ಕರೆದು ಮಾತನಾಡಬೇಕು. ಕಾನೂನು ಮೂಲಕ ಬಗೆಹರಿಸಿಕೊಳ್ಳಿ ಎಂದು ಸಚಿವರು ಹೇಳುವುದು ಸರಿಯಲ್ಲ” ಎಂದು ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯ ಅವರು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಕರೆಮಾಡಿ ಮಾತನಾಡಿದ್ದಾರೆ. ಆದಷ್ಟು ಶೀಘ್ರವೇ ಆಡಳಿತ ಮಂಡಳಿ ಹಾಗೂ ಕಾರ್ಮಿಕ ನಾಯಕರ ಸಭೆ ಕರೆದು ಸಮಸ್ಯೆ ಬಗೆಹರಿಸುವಂತೆ ತಿಳಿಸಿದ್ದಾರೆ.