ಮಂಗಳೂರು: ವೇಶ್ಯಾವಾಟಿಕೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಪೊಲೀಸರು ಬೆಂಗಳೂರು ಉತ್ತರಹಳ್ಳಿಯ ನಿವಾಸಿ ನೊಂದ ಮಹಿಳೆಯನ್ನು ರಕ್ಷಿಸಿದ್ದಾರೆ.
ವೇಶ್ಯಾವಾಟಿಕೆ ದಂಧೆಯಲ್ಲಿ ನಿರತರಾಗಿದ್ದ ಮಂಗಳೂರು ತಾಲೂಕಿನ ಹಳೆಯಂಗಡಿ ಸಮೀಪದ 10ನೇ ತೋಕೂರು ನಿವಾಸಿ ಹರೀಶ್ (42) ಮತ್ತು ಬಂಟ್ವಾಳ ತಾಲೂಕಿನ ಮೂಡನಡಗೋಡು ದಡ್ಡಲ್ ಕಾಡ್ ನಿವಾಸಿ, ಪ್ರಸ್ತುತ ಸುರತ್ಕಲ್ ಇಡ್ತಾ ಬಳಿಯ ಜಾರ್ಡಿನ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ಲೋಕನಾಥ್ ಫೂಜಾರಿ ಯಾನೆ ನವೀನ್ (42)ಬಂಧಿತರು.
ಈ ಆರೋಪಿಗಳು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ ಗ್ರಾಮದ ಬಿಎಎಸ್ ಎಫ್ ಫ್ಯಾಕ್ಟರಿಯ ಎದುರುಗಡೆ ಇರುವ ಫೆರಾವೊ ಕಾಂಪ್ಲೆಕ್ಸ್ ನಲ್ಲಿರುವ ಫೆರಾವೊ ಲಾಡ್ಜಿಂಗ್ & ಬೋರ್ಡಿಂಗ್ ನ ರೂಮ್ ನಂ-205 ರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.