ಉಡುಪಿ: ಕರಾವಳಿಯ ಪ್ರಖ್ಯಾತ ಉದ್ಯಮಿ ವಿಲಾಸ್ ನಾಯಕ್ ಮತ್ತು ಅವರ ತಾಯಿ ವೀಣಾ ಜಿ. ನಾಯಕ್ ಅವರ ಬಂಧನಕ್ಕೆ ಗ್ರಾಹಕ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದೆ. ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಬಂಧನ ವಾರೆಂಟ್ ಜಾರಿಗೊಳಿಸಲು ಆದೇಶ ಹೊರಡಿಸಿದೆ.ಉಡುಪಿಯಲ್ಲಿ ನಿರ್ಮಾಣ ಮಾಡುತ್ತಿರುವ ಸುವಿಧಾ ಹೋಮ್ಸ್ ಎರಡನೇ ಹಂತದ ವಸತಿ ಸಮುಚ್ಚಯದ ನಿರ್ಮಾಣ ವಿಳಂಬ, ಕಳಪೆ ಗುಣಮಟ್ಟ ಹಾಗೂ ಇತರ ಗ್ರಾಹಕ ಸಂಬಂಧಿ ದೂರುಗಳ ಹಿನ್ನೆಲೆಯಲ್ಲಿ ಕೆಲ ಗ್ರಾಹಕರು ಉಡುಪಿ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ್ದ ಉಡುಪಿ ಗ್ರಾಹಕ ನ್ಯಾಯಾಲಯ 2019ರ ನವೆಂಬರ್ನಲ್ಲಿ ಐದು ಮಂದಿ ಗ್ರಾಹಕರಿಗೆ ತಲಾ ಸುಮಾರು 15 ಲಕ್ಷ ರೂಪಾಯಿಗಳಷ್ಟು ಪರಿಹಾರ ನೀಡುವಂತೆ ವೀಣಾ ಜಿ. ನಾಯಕ್, ವಿಲಾಸ್ ನಾಯಕ್ ಹಾಗೂ ಇತರರಿಗೆ ಆದೇಶ ಮಾಡಿತ್ತು.
ಆದರೆ, ಅವರು ಈ ಬಗ್ಗೆ ಸಕಾರಾತ್ಮಕ ಸ್ಪಂದನೆ ಮಾಡಿರಲಿಲ್ಲ. ಇದರಿಂದ ಐವರು ಅರ್ಜಿದಾರರು ಮತ್ತೆ ಉಡುಪಿ ನ್ಯಾಯಾಲಯದ ಮೆಟ್ಟಿಲೇರಿ ಆದೇಶ ಜಾರಿಗೊಳಿಸುವಂತೆ ಮರು ಅರ್ಜಿ ಸಲ್ಲಿಸಿದ್ದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಒಂದು ವರ್ಷಗಳಷ್ಟು ಕಾಲ ನ್ಯಾಯಾಲಯ ಕಾರ್ಯಕಲಾಪ ವಿಳಂಬವಾಗಿತ್ತು. ಆದರೆ, ಈ ಪರಿಹಾರದ ಮೊತ್ತವನ್ನು ನೀಡಲು ಉದ್ಯಮಿ ವಿಲಾಸ್ ನಾಯಕ್ ಮತ್ತು ವೀಣಾ ಜಿ. ನಾಯಕ್ ಅವರು ಹಿಂದೇಟು ಹಾಕಿದ್ದು, ಇದನ್ನು ಪರಿಗಣಿಸಿದ ಗ್ರಾಹಕ ನ್ಯಾಯಾಲಯ, ಸುವಿಧಾ ಹೋಮ್ಸ್ ಗೃಹ ನಿರ್ಮಾಣ ಸಮುಚ್ಚಯಕ್ಕೆ ಸಂಬಂಧಿಸಿದಂತೆ ವಿಲಾಸ್ ನಾಯಕ್ ಹಾಗೂ ಇತರರ ಬಂಧನಕ್ಕೆ ವಾರೆಂಟ್ ಜಾರಿಗೊಳಿಸಿದೆ.
ಮಧ್ಯೆ, ವಿಲಾಸ್ ನಾಯಕ್ ಹಾಗೂ ಇತರರು ರಾಜ್ಯ ಗ್ರಾಹಕ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಆದರೆ, ಇದುವರೆಗೆ ಉಡುಪಿ ನ್ಯಾಯಾಲಯದ ಕಾರ್ಯಕಲಾಪಕ್ಕೆ ತಡೆಯಾಜ್ಞೆ ಪಡೆಯಲು ಸಾಧ್ಯವಾಗಿಲ್ಲ.ಗ್ರಾಹಕರಿಬ್ಬರ ಪರ ಮಂಗಳೂರು ನ್ಯಾಯವಾದಿ ಶ್ರೀಪತಿ ಪ್ರಭು ವಾದಿಸಿದ್ದಾರೆ.